ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭ ಆಶಯಗಳು
ಕನ್ನಡದ ಬಗ್ಗೆ ಜಾಗೃತಿ ಮೂಡುತ್ತಿರುವ ಈ ಸುಸಮಯದಲ್ಲಿ ನಮ್ಮಿಂದ ಚುನಾಯಿತರಾದ ರಾಜಕಾರಣಿಗಳಲ್ಲಿ ಮನವಿ ಮಾಡಿಕೊಳ್ಳೋಣ. ಕನ್ನಡವನ್ನು ಉಳಿಸಿ, ಬೆಳೆಸಿ. ಕನ್ನಡಕ್ಕೆ ಮೊದಲ ಆದ್ಯತೆ ಸಿಗಲಿ.
ವಿದ್ಯಾಭ್ಯಾಸ ಕನ್ನಡದಲ್ಲೇ ಇಲ್ಲದಿರುವುದೊಂದು ಖೇದದ ವಿಷಯ. ಹೇಗೆ ಚೀನಾ, ಕೊರಿಯಾ, ಜಪಾನ್, ಜರ್ಮನಿ ಮತ್ತಿತರೇ ಮುಂದುವರೆದ ದೇಶಗಳಲ್ಲಿ ವಿದ್ಯಾಭ್ಯಾಸವು ಅವರದ್ದೇ ಭಾಷೆಯಲ್ಲಿ ಲಭ್ಯವಿದೆಯೋ ಹಾಗೇ ಕನ್ನಡದಲ್ಲೇ ಎಲ್ಲ ವಿಷಯಗಳ ವಿದ್ಯೆಯೂ ಕನ್ನಡದಲ್ಲೇ ಲಭ್ಯವಾಗುವಂತೆ ಮಾಡಬೇಕು. ನಮ್ಮಲ್ಲಿರುವ ಬುದ್ಧಿ ಜೀವಿಗಳು ಅವರವರ ಕ್ಷೇತ್ರಗಳಲ್ಲಿ ಇಂಗ್ಲೀಷ್ ಅಥವಾ ಬೇರೆ ಯಾವುದೇ ಭಾಷೆಯಲ್ಲಿರುವ ಪದಗಳನ್ನು ಕನ್ನಡೀಕರಿಸಿ ಪಾರಿಭಾಷಿಕ ನಿರ್ಮಿಸಲು ಮುಂದಾಗಲಿ. ಇದರಿಂದಾಗಿ ಮುಂದಿನ ಪೀಳಿಗೆಯ ವಿದ್ಯಾಭ್ಯಾಸದಲ್ಲಿ ಎಲ್ಲ ವಿಷಯಗಳೂ ಕನ್ನಡದಲ್ಲೇ ಲಭ್ಯವಾಗಲಿ. ಆಗ ಎಲ್ಲ ಮಕ್ಕಳೂ ಕನ್ನಡವನ್ನು ಕಡ್ಡಾಯವಾಗಿ ಕಲಿಯಬಹುದು. ಈ ನಿಟ್ಟಿನಲ್ಲಿ ರಾಷ್ಟ್ರಕ್ಕೆ ಕನ್ನಡಿಗರು ಮಾದರಿಯಾಗಲು ಪ್ರಯತ್ನಿಸೋಣ, ಎಂಬುದು ನನ್ನ ಚಿಂತನೆ.
ಇನ್ನೂ ನೋಡಿ ಕನ್ನಡದ ಸೊಗಡಿಗೆ ಮಾರು ಹೋಗಿ ಬಹಳ ಹಿಂದೆ ಕ್ರೈಸ್ತ ಧರ್ಮ ಪ್ರಚಾರಕ್ಕಾಗಿ ಬಂದ ರೆವರೆಂಡ್ ಫಾದರ್ ಕಿಟ್ಟೆಲ್ ಅವರು ಕನ್ನಡ ಕಲಿತು ಕನ್ನಡದಲ್ಲೇ ಪಾರಿಭಾಷಿಕ ರಚಿಸಿದರು. ಇವರು ಮೂಲತ: ಜರ್ಮನಿಯವರು. ಇನ್ನು ಕನ್ನಡದಲ್ಲೇ ಜಾಸ್ತಿ ಜ್ಞಾನಪೀಠ ಪ್ರಶಸ್ತಿ ಪಡೆದವರು ಇರುವುದು. ಹಾಗೆ ನೋಡಿದರೆ ಅವರಲ್ಲಿ ಬಹಳಷ್ಟು ಕವಿಗಳ ಮನೆ ಮಾತು ಕನ್ನಡವಲ್ಲವೇ ಅಲ್ಲ. ಇನ್ನೂ ಕನ್ನಡದ ಮೊದಲ ಪ್ರೊಫೆಸರ್ ಆಗಿದ್ದ ತಳುಕಿನ ವೆಂಕಣ್ಣಯ್ಯನವರ ಮನೆ ಮಾತು ತೆಲುಗು. ಅವರು ಅವರ ಶಿಷ್ಯಂದಿರುಗಳಿಗೆ ಮನೆಯಲ್ಲಿ ಊಟ ಹಾಕಿ ಪಾಠ ಹೇಳಿಕೊಟ್ಟಂಥವರು. ಇಂತಹ ಮಹನೀಯರ ಸಾಲಿಗೇ ಸೇರುವ ಡಿ.ವಿ.ಗುಂಡಪ್ಪ, ದ.ರಾ.ಬೇಂದ್ರೆ, ಕನ್ನಡ ಕುಲ ಪುರೋಹಿತ ಎಂದೇ ಪ್ರಸಿದ್ಧರಾಗಿದ್ದ ಆಲೂರು ವೆಂಕಟರಾಯರು, ಇತ್ಯಾದಿ ಮಹಾಪುರುಷರ ಬಗ್ಗೆಯೂ ನಾವು ತಿಳಿದು ನಮ್ಮ ಮಕ್ಕಳಿಗೆ ಮತ್ತು ಇಂದಿನ ತರುಣ ಜನಾಂಗಕ್ಕೆ ತಿಳಿಸಿಕೊಡಬೇಕಾಗಿದೆ. ಇಂತಹ ಹತ್ತು ಹಲವಾರು ವಿಷಯಗಳಿಂದ ಅವರುಗಳು ಕನ್ನಡ ಭಾಷೆಯ ಹಿರಿಮೆ ತಿಳಿಯಬೇಕಾಗಿದೆ. ಇವರೆಲ್ಲ ಪ್ರಾತ:ಸ್ಮರಣೀಯರು. ಇಂದಿನ ಮಹಾಪುರುಷರುಗಳ ಸಾಲಿನಲ್ಲಿರುವ ನಡೆದಾಡುವ ದೇವರೆಂದೇ ಪ್ರಸಿದ್ಧವಾದ ಶಿವಕುಮಾರ ಸ್ವಾಮಿಜಿಗಳನ್ನೂ ಹೆಸರಿಸಬಹುದು. ಇವರುಗಳಿಂದಲೇ ಕನ್ನಡದ ಭಾಷೆಯ ಶ್ರೀಗಂಧ ವಿಶ್ವದಲ್ಲೆಲ್ಲಾ ಪಸರಿಸಿರುವುದು.
ಈಗೀಗ ಪರಭಾಷೀಯರ ದಾಳಿ ನಮ್ಮ ಕನ್ನಡನಾಡಿನಲ್ಲಿ ಬಹಳವಾಗಿದೆ. ಈಗಿನ ಕನ್ನಡ ನಾಡು ಇನ್ನೊಂದು ಹಾಳು ಹಂಪೆಯಾಗಲು ಅವಕಾಶ ಕೊಡೋದು ಬೇಡ. ಈ ದಿಸೆಯಲ್ಲಿ ಮೊದಲು ನಾವು ನಮ್ಮ ಬಗ್ಗೆ ತಿಳಿದುಕೊಳ್ಳೋಣ. ತಿಳಿದು ಕಲಿಯೋಣ. ಕಲಿತು ಕಲಿಸೋಣ. ಕಲಿಸಿ ಬೆಳೆಯೋಣ. ಬೆಳೆದು ನಾಡನ್ನೂ ಬೆಳೆಸಿ, ಸದೃಢಗೊಳಿಸೋಣ. ಇದು ನಮ್ಮ ಮೊದಲನೆಯ ಆದ್ಯತೆಯಾಗಲಿ.
ಹಾಗೆಂದು ಯಾವ ಭಾಷೆಗಳೂ ನಮಗೆ ವೈರಿಗಳಲ್ಲ. ಎಲ್ಲ ಭಾಷೆಗಳೂ ತಾಯಿಯಂದಿರ ಹಾಗೆ.
ಯಾವ ತಾಯಿಯೂ ಕೆಟ್ಟವಳಲ್ಲ. ಅವಳು ಮಾಡುವುದೆಲ್ಲ ತನ್ನ ಮಕ್ಕಳ ಹಿತಕ್ಕಾಗಿಯೇ. ಇತರ ಭಾಷೆಗಳನ್ನೂ ನಾವು ಕಲಿಯಬೇಕು. ಆದರೆ ನಮ್ಮ ಭಾಷೆಯನ್ನು ಮರೆಯುವಂತಾಗಬಾರದು. ಈಗೀಗ ಇಡೀ ಜಗತ್ತೇ ಚಿಕ್ಕದಾಗುತ್ತಿದೆ. ಯಾರು ಎಲ್ಲಿ ಬೇಕಾದರೂ ಜೀವನ ಮಾಡಬೇಕಾದ ಪ್ರಮೇಯ ಬರಬಹುದು. ಎಲ್ಲಿ ಉಳಿಯಬೇಕೋ ಅಲ್ಲಿಯ ಭಾಷೆ, ಜನಜೀವನಕ್ಕೆ ಹೊಂದಿಕೊಳ್ಳಬೇಕು. ಹೀಗೇ ಕನ್ನಡನಾಡಿಗೆ ಬರುವ ಪರಭಾಷಿಯರೂ ಕನ್ನಡವನ್ನು ಕಲಿಯಬೇಕು. ಇದಕ್ಕಾಗಿ ನಾವೆಲ್ಲರೂ ಕನ್ನಡ ಕಲಿಸೋಣ, ಎಲ್ಲರ ಪ್ರೀತಿ ಗಳಿಸೋಣ. ಕನ್ನಡದ ಸೊಗಡನ್ನು ಜಗತ್ತಿಗೇ ಸಾರೋಣ.
ಜೈ ಕರ್ನಾಟಕ ಮಾತೆ
ಸಿರಿಗನ್ನಡಂ ಗೆಲ್ಗೆ – ಕನ್ನಡ ಎಲ್ಲೆಲ್ಲಿಯೂ ಬೆಳಗೇ
3 replies on “ಕನ್ನಡ ರಾಜ್ಯೋತ್ಸವದ ಶುಭ ಆಶಯಗಳು”
Hi Srinivas,
I read on American Bedu that you were diagnosed with a serious illness. I am just writing to wish you good health. I pray that you get completly cured soon.
Hello Srinivas, I hope you are well. I just wanted to let you know that I have a new blog Chez Chiara http://www.chezchiara.com and all my old posts and some new ones are there. I hope you will become a regular reader and commentator! I always enjoy your comments.
ನೀವು ಬೇಗ ಗುಣಮುಖರಾಗಲೆಂದು ಹಾರೈಸುತ್ತೇನೆ