ಸಾಮಾನ್ಯವಾಗಿ ಎಲ್ಲರೂ ತಮ್ಮ ದೈನಂದಿನ ಜೀವನಕ್ಕಿಂತ ಹೆಚ್ಚು ಗಳಿಕೆಯಲ್ಲಿ ಹಾತೊರೆಯುತ್ತಾರೆ. ಬರುವ ಆದಾಯದಲ್ಲಿ ಖರ್ಚು ಕಳೆದು ಉಳಿದಿದ್ದನ್ನು ಠೇವಣಿ ಅಥವಾ ಇತರೆ ಹೂಡಿಕೆಯನ್ನು ಹೆಚ್ಚಿನ ಆದಾಯಕ್ಕಾಗಿ ಮಾಡುವರು. ಹೀಗೆ ಮಾಡುವವರು ಕೆಲವೊಮ್ಮೆ (ಅದೂ ಈಗೀಗ ಸಾಮಾನ್ಯವಾಗುತ್ತಿದೆ) ಹಣ ಕಳೆದುಕೊಳ್ಳುವರು. ಇದರ ಬಗ್ಗೆ ನನ್ನ ಅನಿಸಿಕೆಯನ್ನು ಬರಹ ರೂಪದಲ್ಲಿ ನಿಮ್ಮ ಮುಂದೆ ಇಡುತ್ತಿರುವೆ.
ಹೆಚ್ಚಿನ ಜನರು, ಎಲ್ಲಿ ಜಾಸ್ತಿ ಬಡ್ಡಿ ಬರುವುದೋ ಅದರಲ್ಲಿ ಠೇವಣಿ ಅಥವಾ ಹೂಡಿಕೆಯನ್ನು ಮಾಡುವುದು, ಸಾಮಾನ್ಯ. ಕೆಲವೊಮ್ಮೆ ಮೊದ ಮೊದಲಿಗೆ ಬಡ್ಡಿ ಸರಿಯಾಗಿ ಬಂದರೂ ಅಸಲನ್ನು ಕಳೆದುಕೊಳ್ಳುವ ನಿದರ್ಶನಗಳಿವೆ. ಅದು ಏಕೆಂದರೆ, ನಾವು ಎಲ್ಲಿ ಹಣವನ್ನು ಇಡುವೆವೋ, ಅಲ್ಲಿಯವರು ಹೆಚ್ಚಿನ ವರಮಾನಕ್ಕಾಗಿ ಇನ್ನೊಂದೆಡೆ ಸಾಲ ಕೊಡುವರು ಅಥವಾ ಹೂಡಿಕೆ ಮಾಡುವರು. ಹೀಗೆ ಮಾಡುವಾಗ ಹೆಚ್ಚಿನ ಮಾಹಿತಿಯನ್ನು ಪಡೆದುಕೊಂಡಿರಬೇಕು. ಅವರೆಲ್ಲಿ ಹೂಡಿಕೆ ಮಾಡಿರುವರೋ, ಅದು ದೇಶದ ಹಿತಕ್ಕೆ ವಿರುದ್ಧವಾಗಿದೆಯೋ, ಕಾನೂನು ಬಾಹಿರವಾದದ್ದೋ, ಅದು ಮಾರುಕಟ್ಟೆಗೆ ವಿರುದ್ಧವಾಗಿದೆಯೋ, ಅದರ ಉತ್ಪನ್ನಗಳಿಗೆ ಬೇಡಿಕೆ ಇರುವುದೋ ಮತ್ತು ಹೆಚ್ಚುವುದೋ ಇಲ್ಲವೋ, ಆ ಸಂಸ್ಥೆಯ ವಹಿವಾಟು ಎಂತಹದ್ದು ಇತ್ಯಾದಿಗಳನ್ನು ತಿಳಿದುಕೊಂದರೆ, ನಮ್ಮ ಹಣ ಸುರಕ್ಷಿತವಾಗಿದೆಯೋ ಇಲ್ಲವೋ ಎಂಬುದು ಗೊತ್ತಾಗುವುದು. ನಾವು ಹಾಕಿರುವ ಹಣ ಬರಿಯ ಗಳಿಕೆಯನ್ನೇ ಅವಲಂಬಿಸಿರಬಾರದು, ಅದು ಸುರಕ್ಷಿತವೂ ಹಾಗೂ ನಮಗೆ ಬೇಕಿದ್ದ ಸಮಯಕ್ಕೆ ಸರಿಯಾಗಿ ಸಿಗುವಂತೆಯೂ ಇರಬೇಕು.
ಇನ್ನು ಬಡ್ಡಿಯ ದರದ ಬಗ್ಗೆ ಹೇಳುವುದಾದರೆ, ಸರಕಾರಿ ಮೂಲಗಳು ಅಥವಾ ಸಂಸ್ಥೆಗಳು (ಉದಾಹರಣೆಗೆ ಆರ್.ಬಿ.ಐ., ಎಸ್.ಬಿ.ಐ., ಇತರೆ) ಪ್ರಕಟಿಸುವ ಅಂಕಿ ಅಂಶಗಳ ಆಧಾರದ ಮೇಲೆ ಬಡ್ಡಿಯ ದರವನ್ನು ನಿಷ್ಕರ್ಷಣೆ ಆಗುವುದು. ಆ ಅಂಕಿ ಅಂಶಗಳು, ಕೃಷಿ ಉತ್ಪಾದನೆ, ಕೈಗಾರಿಕಾ ಕ್ಷೇತ್ರದ ಉತ್ಪಾದನೆ, ಇತ್ಯಾದಿಗಳನ್ನು ಅವಲಂಬಿಸಿರುತ್ತದೆ. ಸರಕಾರದ ಜಿ.ಡಿ.ಪಿ. ಉತ್ಪಾದನೆ ಶೇಕಡ ೩ ರಿಂದ ೪ ಇದ್ದಾಗ ಬಡ್ಡಿಯ ದರವು ೨೦ ಯಾ ೨೪ ಇರಲಾಗುವುದಿಲ್ಲ. ಅದು ಕೂಡಾ ೪ಕ್ಕಿಂತ ಕಡಿಮೆಯೇ ಇರುತ್ತದೆ. ಉತ್ಪಾದನೆಯೇ ಇಲ್ಲದೇ ಹೇಗೆ ಹೆಚ್ಚಿನ ಬಡ್ಡಿಯನ್ನು ಕೊಡಲಾಗುವುದು.
ಕಷ್ಟಪಟ್ಟು ದುಡಿದ ಹಣ ಎಂದೂ ಪೋಲಾಗಬಾರದು. ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ಹೂಡಿಕೆ ಅಥವಾ ಠೇವಣಿ ಇಡುವುದು ಒಳಿತು.